ಸೋಮವಾರ, ಆಗಸ್ಟ್ 8, 2011

ಪರಿಚಯ -1

ಹಿಂದೆ ಬ್ಲಾಗಿನಲ್ಲಿ ಬರೆಯುವಾಗ ಹರಿಹರಪುರದಲ್ಲಿ ನಮಗೆ ಆತ್ಮೀಯರಾದ ಬಂಧುಗಳನ್ನು ಪರಿಚಯಿಸುತ್ತೇನೆ ಎಂದು ಬರೆದಿದ್ದೆನು. . . . ಮುಂದುವರೆಸುತ್ತಾ

ನಮ್ಮ ಅತ್ತೆಯವರ ಅಣ್ಣ ಹರಿಹರಪುರದ ದಿ. ನಂಜಪ್ಪನವರದ್ದು ತುಂಬು ಸಂಸಾರ. ಇವರು ಏಳು ಹಳ್ಳಿ ಶಾನುಭೋಗರಾಗಿದ್ದರಂತೆ. ಸದಾ ಅವರ ಮನೆಯಲ್ಲಿ ಜನ, ಆಳುಗಳು ತುಂಬಿರುತ್ತಿದ್ದರಂತೆ. ಸಮೃದ್ಧಿ ಕಾಲ. ಹರಿಹರಪುರಕ್ಕೆ ಯಾರೇ ಬಂದರೂ ಇವರ ಮನೆಯಲ್ಲಿ ವಾಸ್ತವ್ಯ. ಇವರು ಈಗ ದಿವಂಗತರಾಗಿದ್ದಾರೆ. ಅವರ ಹಿರಿಯ ಮನಾದ:

೧) ಶ್ರೀಕಂಠಯ್ಯ:

ಅಂದರೆ ನಮ್ಮ ಮನೆಯವರ ಸೋದರಮಾವನ ಮಗ. ಇವರು ವೃತ್ತಿಯಲ್ಲಿ ಹೈಸ್ಕೂಲ್‌ನಲ್ಲಿ ಮುಖ್ಯೋಪಾಧ್ಯಾರಾಯರಾಗಿ ನಿವೃತ್ತಿ ಹೊಂದಿರುತ್ತಾರೆ. ಹಾಲಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ಧರ್ಮಪತ್ನಿ ಮಂಜುಳ. ಇವರಿಗೆ ಮೂರು ಜನ ಹೆಣ್ಣುಮಕ್ಕಳು. ಕೊನೆಯ ಮಗಳಿಗೆ ಇದೇ ಆಗಸ್ಟ್-೧೫ ರಂದು ಮದುವೆ ನಡೆಯಲಿದೆ.

ಇವರ ವ್ಯಕ್ತಿತ್ವ ಬಹಳ ದೊಡ್ಡದು. ತುಂಬು ಸಂಸಾರದಲ್ಲಿ ಬೆಳೆದ ಇವರಿಗೆ ಬಹಳ ದೊಡ್ಡ ಗುಣವಿದೆ. ಹಿರಿಯ ಮಗನಾಗಿ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ನಮ್ಮ ಮನೆಯವರೂ ಸಹ ಓದುವ ಕಾಲದಲ್ಲಿ ಇವರ ಮನೆಯಲ್ಲಿ ಇದ್ದರಂತೆ. ಶ್ರೀಕಂಠಿ ಅವರ ತಮ್ಮಂದಿರಿಗೆ ಏನು ತಂದರೂ ಸಹ ಇವರಿಗೂ ತಂದುಕೊಡುತ್ತಿದ್ದರಂತೆ. ಇವರಿಗೆ ಎಲ್ಲಾ ಸಂಬಂಧಿಕರು ಬೇಕು. ಊರಲ್ಲಿ ಯಾರದೇ ಮನೆಯಲ್ಲಿ ಮದುವೆ ಮುಂಜಿ ಇತರೆ ಕಾರ್ಯಕ್ರಮ ನಡೆಯಲಿ ಮುಂದೆ ನಿಂತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಾರೆ. ಎಲ್ಲರ ಮನೆಯ ಕಾರ್ಯಕ್ರಮಗಳಿಗೂ ಬರುತ್ತಾರೆ. ಹರಿಹರಪುರಕ್ಕೆ ನಾವುಗಳು ಹೋದರೆ ಮೊದಲು ಇವರ ಮನೆಗೆ ಹೋಗಿ ಮಾತನಾಡಿಸಿಕೊಂಡು ಬರಬೇಕು. ಆ ತರಹದ ಒಂದು ಆತ್ಮೀಯತೆ ಇಟ್ಟುಕೊಂಡಿದ್ದಾರೆ. ಇವರನ್ನು ನಾವೆಲ್ಲರೂ ಹಿರಿಯ ಸ್ಥಾನದಲ್ಲಿಟ್ಟುಕೊಂಡು ಗೌರವಯುತವಾಗಿ ನಡೆದುಕೊಳ್ಳುತ್ತೇವೆ.

ಇದೇ ತರಹ ಸಂಬಂಧ ಮುಂದುವರೆಯಲಿ ಎಂದು ನಮ್ಮ ಅನಿಸಿಕೆ.

೨) ದತ್ತಾತ್ರಿ:

ಇವರು ದಿವಂಗತ ನಂಜಪ್ಪನವರ ಮಗಳ ಮಗ. ಅಂದರೆ ನಮ್ಮ ಮನೆಯವರಿಗೆ ಸೋದರಮಾವನ ಮಗಳ ಮಗ. ಆದರೆ ನಮ್ಮ ಮನೆಯವರಿಗೆ ಸ್ವಂತ ತಮ್ಮನಷ್ಟು ಸಲಿಗೆ. ಇವರು ವೃತ್ತಿಯಲ್ಲಿ ಕೆ.ಇ.ಬಿ.ಯಲ್ಲಿ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಸ್ವಯಂ ನಿವೃತ್ತಿ ಪಡೆದುಕೊಂಡು ಈಗ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾರೆ. ಇವರ ವ್ಯಕ್ತಿತ್ವ ಬಹಳ ದೊಡ್ಡದು. ಇವರು ತಮ್ಮ ಮನೆಯ ಎಲ್ಲಾ ಜವಾಬ್ದಾರಿಯನ್ನು ಮುಗಿಸಿ ಈಗ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಎಲ್ಲರ ಕಷ್ಟಸುಖಗಳಿಗೂ ಸ್ಪಂಧಿಸುವ ವ್ಯಕ್ತಿ. ಆ ಒಂದು ದೊಡ್ಡಗುಣ ಎಲ್ಲರಿಗೂ ಬರುವುದಿಲ್ಲ. ಬಹಳ ಬುದ್ಧಿವಂತ. ಉನ್ನತ ಹುದ್ದೆಯಲ್ಲಿ ಇದ್ದೀನೆಂಬ ಅಹಂ ಇಲ್ಲ. ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುತ್ತಾರೆ. ನಮ್ಮ ಸಂಸಾರಕ್ಕಂತೂ ಬಹಳ ಹತ್ತಿರ, ಸಲುಗೆ. ಶಿವಮೊಗ್ಗಗೆ ಬಂದರೆ ನಮ್ಮ ಮನೆಯಲ್ಲೇ ಉಳಿಯುವುದು. ಹಿಂದೆ ಇವರಿಬ್ಬರೂ ತಮ್ಮ ವಿದ್ಯಾಭ್ಯಾಸದ ಕಾಲದಲ್ಲಿ ಕಷ್ಟಪಟ್ಟಿದನ್ನು ನೆನಪಿಸಿಕೊಳ್ಳುತ್ತಾರೆ. ತಂಗಿಯರ ಮದುವೆ ಮಾಡುವಾಗ ಎಷ್ಟು ಕಷ್ಟ ಪಟ್ಟೆವು ಎಂದು ಒಬ್ಬರಿಗೊಬ್ಬರು ಹೇಳಿಕೊಂಡು ಹಿಂದಿನದೆಲ್ಲವನ್ನೂ ನೆನಪಿಸಿಕೊಳ್ಳುತ್ತಾ, ಎಲ್ಲರೂ ಅವರವರ ಪಾಡಿಗೆ ಸಂಸಾರ ಮಾಡಿಕೊಂಡು ಚೆನ್ನಾಗಿದ್ದಾರೆ. ನಾವು ಆಗ ಕಷ್ಟಪಟ್ಟಿದ್ದಕ್ಕೆ ಈಗ ದೇವರು ನಮ್ಮನ್ನು ಚೆನ್ನಾಗಿಟ್ಟಿರುವುದರಿಂದ ಎಲ್ಲರ ಕಷ್ಟಸುಖಗಳಿಗೆ ಭಾಗಿಯಾಗೋಣ ಎಂದು ಮಾತನಾಡಿಕೊಳ್ಳುತ್ತಾರೆ.

ಇವರ ಸಂಬಂಧವೂ ಸಹ ನಮ್ಮ ಜೊತೆ ಇದೇ ರೀತಿ ಮುಂದುವರೆಯಲಿ ಎಂದು ನಮ್ಮ ಅನಿಸಿಕೆ.

೩)ಕುಮಾರ:

ಕುಮಾರ ನಮ್ಮ ಅತ್ತೆಯವರ ತಮ್ಮನ ಮಗ ಅಂದರೆ ನಮ್ಮ ಮನೆಯವರ ಸೋದರಮಾವ ಪಾಪಣ್ಣನವರ ಮಗ. ಇವನು ಇನ್ನೂ ಚಿಕ್ಕ ವಯಸ್ಸಿನವನು. ಆದರೂ ಜವಾಬ್ದಾರಿಯುತ ಮಗ. ಅಪ್ಪ ಅಮ್ಮನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ನನಗಂತೂ ಸ್ವಂತ ತಮ್ಮನಷ್ಟು ಸಲಿಗೆ. ನಾವು ಹಾಗೂ ಕುಮಾರ, ಹರಿಹರಪುರದಲ್ಲಿ ಅಥವಾ ಬೇರೆ ಸಂಬಂಧಿಕರ ಮದುವೆ ಹಾಗು ಮುಂಜಿ ಕಾರ್ಯಕ್ರಮಗಳನ್ನು ಸಾಮಾನ್ಯವಾಗಿ ತಪ್ಪಿಸುವುದಿಲ್ಲ. ಇಬ್ಬರೂ ಹಾಜರ್. ಹಾಲಿ ಬೆಂಗಳೂರಿನಲ್ಲಿ ವಾಸಾಗಿದ್ದಾನೆ. ಹರಿಹರಪುರಕ್ಕೆ ಬಂದಾಗ ನನ್ನ ನಾದಿನಿ ಮಂಗಳ ಅಂತೂ ಅಳೀಮಯ್ಯ ಏನು ಸಮಾಚಾರ, ಕಾಫಿ ಕುಡಿದುಕೊಂಡು ಹೋಗು ಅಂತ ಮಾತನಾಡಿಸುತ್ತಾಳೆ. ಕಾಫಿ ಕುಡಿಯುವುದಕ್ಕೆ ನಿಮ್ಮನೆಗೆ ಬಂದಿರುವುದು ಅಂತ ನೇರ ಅಡಿಗೆಮನೆಗೆ ಬಂದು ನಮ್ಮ ಅತ್ತೆಯವರ ಹತ್ತಿರ ಕಾಫಿ ಇಸಿದುಕೊಂಡು ಕುಡಿದು ಹೋಗುವ ಅಭ್ಯಾಸ. ಕುಮಾರನೂ ಸಹ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಸಹ ಸ್ವಂತ ಮನೆಯವರ ತರ ಓಡಾಡಿಕೊಂಡು ಕೆಲಸ ಮಾಡುತ್ತಾನೆ. ಎಲ್ಲರೊಡನೆ ಹೊಂದಿಕೊಂಡು ಹೋಗುವ ಸ್ವಭಾವ.

ಇವನ ಸಂಬಂಧವೂ ಸಹ ನಮ್ಮ ಜೊತೆ ಇದೇ ರೀತಿ ಮುಂದುವರೆಯಲಿ ಎಂದು ನಮ್ಮ ಅನಿಸಿಕೆ.

೪) ಲಕ್ಷ್ಮೀ ನಾಗೇಶ್( ಸುಬ್ಬಣ್ಣ):

ಇವರು ಹರಿಹರಪುರದ ನರಸಮ್ಮ ನಾಗರಾಜಯ್ಯ ಇವರ ಹಿರಿಯ ಮಗ ( ಅಂದರೆ ಶ್ರೀಧರ್ ಅವರ ಅಣ್ಣ) ಹಾಗೂ ನಮ್ಮ ಮನೆಯವರ ಸ್ನೇಹಿತ. ಇಬ್ಬರೂ ಒಟ್ಟಿಗೆ ಓದಿದವರು. ಇವರೂ ಸಹ ಓದುವಾಗ ಬಹಳ ಕಷ್ಟಪಟ್ಟು ಮುಂದೆ ಬಂದು ಒಂದು ಸರ್ಕಾರಿ ನೌಕರಿ ಹಿಡಿದು ಹಾಲಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಸ್ವಭಾವತ: ನೇರ ನುಡಿ. ಅಂತರಂಗದಲ್ಲಿ ಕಲ್ಮಶವಿಲ್ಲ. ಇವರನ್ನು ಕಂಡರೆ ಏನೋ ಒಂದು ತರಹದ ಗೌರವ ಭಾವನೆ ಮೂಡುತ್ತದೆ. ನಮ್ಮ ಮನೆಯವರ ಹತ್ತಿರ ಆತ್ಮೀಯವಾಗಿ ಮನಬಿಚ್ಚಿ ಮಾತನಾಡುತ್ತಾರೆ.

ಇವರ ಸಂಬಂಧವೂ ಸಹ ನಮ್ಮ ಜೊತೆ ಇದೇ ರೀತಿ ಮುಂದುವರೆಯಲಿ ಎಂದು ನಮ್ಮ ಅನಿಸಿಕೆ.

- ವಿಜಯ ಶ್ರೀಕಂಠಮೂರ್ತಿ