ಗುರುವಾರ, ಸೆಪ್ಟೆಂಬರ್ 9, 2010

ಅಜ್ಜೀ ಹತ್ರ ತಲೆ ಸವರಿಸಿಕೊಂಡಿದ್ದೀರಾ?ಅದರ ಸುಖ ಗೊತ್ತೇ?

[ಸಂಪದದಲ್ಲಿ ಪ್ರಕಟಿಸಿದ್ದ ಬರಹ]

ಈಗಿನ್ನೂ ನಾನೂ ನನ್ನ ಬಾಲ್ಯ ನೆನಪಿಸಿಕೊಂಡು ಒಂದು ಲೇಖನ ಬರೆದೆ. ಚಂದ್ರಶೇಕರ್ ಲೇಖನವೂ ಕಣ್ಣಿಗೆಬಿತ್ತು."ಬಾಲ್ಯದ ನೆನಪು" ನೇರಲೆ ಹಣ್ಣು ತಿಂದಷ್ಟೇ ಸಂತೋಶವಾಯ್ತು . ಯಾಕೆ ಗೊತ್ತಾ? ನಾನೇ ಸ್ವತ: ದನಾ ಕಾಯ್ತಿದ್ದೆ ರೀ. ನಮ್ಮನೇಲೀ ನಮ್ಮಜ್ಜಿ ಇದ್ರು. ಮಲಗಿದ್ದಬಳೀ ಮಲಗಿಕೊಂಡಿದ್ದರೂ ಸದಾಕಾಲ ಮನೆಯ ಆಗುಹೋಗುಗಳ ಚಿಂತೆ ಅವರಿಗೆ. ಆಗಾಗ ಟೈಮ್ ಕೇಳೀ ಕೇಳೀ " ದನಾ ಬೆಟ್ಟಕ್ಕಟ್ಟಿದಿರಾ? ಹಸುಗೆ ಕಲಗಚ್ಚು ಇನ್ನೂ ಇಡಲಿಲ್ಲವೇ? ಹಸು ಕರು ಬಿಟ್ಟರಾ? ಹೀಗೆ ಕಾಲಕಾಲಕ್ಕೆ ಎಲ್ಲಾ ಕೆಲಸಾನೂ ಹೇಳಿ ಹೇಳಿ ಮಾಡಿಸ್ತಾ ಇದ್ರೂ, ಮಲಗಿದ್ದ ಬಳಿಯೇ!

ಮದ್ಯಾಹ್ನ ನಾಲ್ಕು ಗಂಟೆ ಯಾಯ್ತೆಂದ್ರೆ ಸಾಕು" ದನಾ ಹೊಡ್ಕೊ೦ಡ್ ಬರೋಕೆ ಯಾರು ಹೋದ್ರು? ನಾಗೂ ನೇ[ನಮ್ಮಪ್ಪ] ಅವ್ನಾದ್ರೆ ಇವತ್ತು ದನಗಳಿಗೆ ದೊಡ್ಡೀನೇ ಗತಿ. ಶ್ರೀಧರನೇ? ಅವನಾದ್ರೆ ಎಲ್ಲಿದ್ದರೂ ಹೊಡೆದುಕೊಂಡೆ ಬರ್ತಾನೆ. ನನ್ನ ಬಗ್ಗೆ ಅದೆಂತಹಾ ವಿಶ್ವಾಸ ಇತ್ತೆಂದರೆ....ಅದರಿಂದ ಅವರು ಹೊಗಳಲೀ ಅಂತಾನೇ ನಾನು ಮೈ ಮುರಿದು ಕೆಲಸ ಮಾಡೀ ಮಾಡೀ ಹೊಗಳಿಸಿಕೊಳ್ಳುತ್ತಿದ್ದೆ. ಈಗಲೂ ಹಾಗೇ ಅನ್ನಿ. ಇರಲಿ. ಅದೇ ಕಥೆ ಇನ್ನೂ ಪೂರ್ತಿ ಆಗಿಲ್ಲ. ನಮ್ಮೂರಲ್ಲಿ ಮೂರು ಬೆಟ್ಟಗಳ ಸಾಲು. ಚಿಕ್ಕಬೆಟ್ಟ, ದೊಡ್ಡಬೆಟ್ಟ, ಗೋರೀ ಬೆಟ್ಟ ಅಂತಾ ಹೆಸರು. ನಮ್ಮಪ್ಪ ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ ಚಿಕ್ಕ ಬೆಟ್ಟಕ್ಕೆ ದನಗಳನ್ನು ಹೊಡೆದುಕೊಂಡು ಬಿಟ್ಟು ಬಂದರೆ ಅವು ಮೇಯುತ್ತಾ ಮೇಯುತ್ತಾ ಚಿಕ್ಕಬೆಟ್ಟದಿಂದ, ಗೋರೀ ಬೆಟ್ಟ, ಬಳಸಿಕೊಂಡು ಸಂಜೆಹೊತ್ತಿಗೆ, ದೊಡ್ಡ ಬೆಟ್ಟದಲ್ಲಿರುತ್ತಿದ್ದವು. ಸಂಜೆ ಸ್ಕೂಲ್ ಮುಗಿಸಿ ನಾನು ಬೆಟ್ಟದ ಬುಡಕ್ಕೆ ಹೋಗಿ ನನ್ನ ಟೆಲಿಸ್ಕೋಪಿಕ್ ಕಣ್ಣುಗಳಿಂದ ದೃಷ್ಟಿ ಹಾಯಿಸಿ ನೋಡಿದರೆ ದೊಡ್ದಬೆಟ್ಟದಲ್ಲಿ ಎಲ್ಲಾದರೂ ಒಂದುಕಡೆ ಮೇಯ್ತಿರೋದು ಕಣ್ಣಿಗೆ ಬೀಳ್ತಿತ್ತು. ಆಗ ಅಲ್ಲಿಗೆ ಹೋಗಿ ದನ ಅಟ್ಟಿಕೊಂಡು ಬರ್ತಿದ್ದೆ. ಒಂದಿನಾ ಏನಾಯ್ತು, ಗೊತ್ತಾ? ನನಗೆ ಕೆಳಗಿನಿಂದ ದನ ಕಾಣ್ಲಿಲ್ಲ. ಹೀಗೆ ಅದೆಷ್ಟೋ ದಿನ ಆಗ್ತಿತ್ತು. ಸರೀ ಹುಡುಕಿಕೊಂಡು ಹೊರಟೆ. ನಾನು ದೊಡ್ದಬೆಟ್ಟದ ನೆತ್ತಿಯಲ್ಲಿದ್ದೀನಿ. ಅಲ್ಲಿಂದ ನೋಡಿದರೆ ಕೆಳಗಡೆ ಬೀರನಹಳ್ಳಿಯ ಹೊಲದಲ್ಲಿ ದನಗಳು ಜೋಳ ಮೇಯ್ತಿವೆ! ಅಲ್ಲಿಂದ ನೇರ ಕೆಳಕ್ಕೆ ಓಡುತ್ತಾ ಬಂದೆ ನೋಡಿ! ಅಬ್ಭಾ! ಇವತ್ತು ನೆನಸಿ ಕೊಂಡರೆ, ನನಗೇ ಆಶ್ಚರ್ಯ ವಾಗುತ್ತೆ! ಈಗ ಯಾರು ನೋಡಿದರೂ ಅಸಾಧ್ಯವೆಂದೇ ಹೇಳ್ತಾರೆ! ಆದರೆ ಅವತ್ತು ಅದು ಸಾಧ್ಯವಾಯ್ತು.ಸಂಜೆ ಸ್ವಲ್ಪ ಲೇಟಾಗಿ ಮನೆಗೆ ದನಾಹೊಡೆದುಕೊಂಡುಬಂದು ನಮ್ಮಜ್ಜಿ ಹತ್ತಿರ ನನ್ನ ಸಾಹಸದ ಕಥೆ ಹೇಳಿ ,ಅವರ ಮುಂದೆ ಹೀರೋ ಪೋಸ್ ಕೊಟ್ಟು , ಅವರ ಬಳೀ ಕೂತ್ಕೊಂಡು ತಲೆ ಸವರಿಸಿಕೊಂದಿದ್ದನ್ನು ನೆನಪಿಸಿಕೊಂಡ್ರೆ, ಇವತ್ತಿನ ಯಾವ ಸುಖಕ್ಕೂ ಅದು ಕಮ್ಮಿ ಇರಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ