ಭಾನುವಾರ, ಜುಲೈ 17, 2011

ಉತ್ತಮ ಬಾಂಧವ್ಯದೆಡೆಗೆ

     ಮಿತ್ರ ಶ್ರೀಧರರ ಈ ತಾಣ 'ನಮ್ಮೂರು ನಮ್ಮನೆ ನಮ್ ಜನ' ಅವರ ಸದಭಿರುಚಿಗೆ ಸಾಕ್ಷಿಯಾಗಿದೆ. ನಮ್ಮವರನ್ನು ಸದ್ವಿಚಾರದೆಡೆಗೆ ಒಯ್ಯುವ ಕಿಂಚಿತ್ ಪ್ರಯತ್ನ ನಮ್ಮ ಕುಟುಂಬದವರಿಂದಲೂ ನಡೆಯುತ್ತಿದೆ. ಪ್ರತಿ ವರ್ಷ ಎಲ್ಲಾ ಬಂಧು-ಬಳಗ-ಮಿತ್ರರನ್ನು ಸೇರಿಸಿ ಒಳ್ಳೆಯ ವಿಚಾರಗಳನ್ನು ಹರಿಬಿಡುವ, ಬಾಂಧವ್ಯಗಳನ್ನು ಬೆಸೆಯುವ ಪ್ರಯತ್ನ ನಡೆಯುತ್ತಿದೆ. ಕೆಳದಿ ಕವಿ ಮನೆತನದವರಾದ ನಾವು ಪರಸ್ಪರರ ಸಂವಹನಾ ಮಾಧ್ಯಮವಾಗಿ 'ಕವಿಕಿರಣ' ಎಂಬ ಅರ್ಧವಾರ್ಷಿಕ ಪತ್ರಿಕೆಯನ್ನೂ ಹೊರತರುತ್ತಿದ್ದೇವೆ. ನಮ್ಮ 'ಕವಿ ಪ್ರಕಾಶನ'ದ ಪ್ರಕಟನೆಗಳನ್ನು 'kavikirana,blogspot.com' ತಾಣದಲ್ಲಿ ನೋಡಬಹುದಾಗಿದೆ. ಮಿತ್ರ ಶ್ರೀಧರರ ಎಲ್ಲಾ ಬಂಧು-ಮಿತ್ರರಿಗೆ ಇದರಿಂದ ಕಿಂಚಿತ್ ಪ್ರೇರಣೆ ಸಿಗಲಿ, ಶ್ರೀಧರರ ಪ್ರಯತ್ನಕ್ಕೆ ಯಶ ಸಿಗಲಿ ಎಂದು ನನ್ನ ಆಸೆ. 'ಕವಿಕಿರಣ' ಪತ್ರಿಕೆಯ ಡಿಸೆಂಬರ್, 2008ರ ಸಂಚಿಕೆಯ ಸಂಪಾದಕೀಯ ಇಲ್ಲಿ ಪ್ರಸ್ತುತವೆನಿಸುವುದರಿಂದ  ಹಾಕಿರುವೆ. ಈ ತಾಣದಲ್ಲಿ ಸಹಲೇಖಕನಾಗಿ ಆಹ್ವಾನಿತನಾಗಿರುವ ನಾನು ಅವರಿಗೆ ಆಭಾರಿ.
      "ವಾವ್!, ನಿಜಕ್ಕೂ ಹೊಸ ಅನುಭವ. ಇಂತಹ ಕಾರ್ಯಕ್ರಮ ನಾನು ಮೊದಲು ನೋಡಿರಲಿಲ್ಲ. ಬಹಳ ಉತ್ತಮವಾದ ಕಾರ್ಯಕ್ರಮ, ಅಭಿನಂದನೆಗಳು! "
     ಇದು ದಿನಾಂಕ ೨೮-೧೨-೨೦೦೮ರಂದು ಬೆಂಗಳೂರಿನಲ್ಲಿ ನಡೆದ ಕೆಳದಿ ಕವಿ ಮನೆತನದವರ ಮತ್ತು ಬಂಧು ಬಳಗದವರ ಮೂರನೆಯ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ್ದವರೊಬ್ಬರ ಪ್ತತಿಕ್ರಿಯೆ. ಉಳಿದವರಿಂದಲೂ ಇದೇ ರೀತಿಯ ಉದ್ಗಾರಗಳು, ಪ್ರತಿಕ್ರಿಯೆಗಳು! ನಿಜ, ಈ ಕಾರ್ಯಕ್ರಮ ಅನುಕರಣೀಯವಾಗಿತ್ತು ಮತ್ತು ಭಿನ್ನವಾಗಿತ್ತು. ಈ ಸಮಾರಂಭದಲ್ಲಿ ಕುಟುಂಬಗಳ ಸಂವಹನಾ ಮಾಧ್ಯಮವಾಗಿ, ಉತ್ತಮ ಬಾಂಧವ್ಯ ವೃದ್ಧಿ ಹಾಗೂ ಸಜ್ಜನಶಕ್ತಿಯ ಜಾಗರಣೆಗಾಗಿ, ಕವಿ ಪ್ರತಿಭೆಗಳ ಅನಾವರಣಕ್ಕಾಗಿ ರೂಪಿಸಿದ ಈ ಪತ್ರಿಕೆ ಕವಿಕಿರಣ ಬಿಡುಗಡೆಯಾಯಿತು. ಗೊತ್ತ್ತಿಲ್ಲದೇ ಇದ್ದ ಅನೇಕ ಬಂಧುಗಳು ಪ್ರಥಮ ಬಾರಿಗೆ ಭೇಟಿಯಾಗಿ ಪರಸ್ಪರ ಪರಿಚಯ ಮಾಡಿಕೊಂಡರು. ಹಿರಿಯರನ್ನು ಸ್ಮರಿಸಿಕೊಂಡರು. ನಾವೂ ಏನನ್ನಾದರೂ ಮಾಡಬೇಕೆಂಬ ಪ್ರೇರಣೆ ಪಡೆದರು. ಪರಸ್ಪರ ಉತ್ತಮ ಬಾಂಧವ್ಯ ಮುಂದುವರೆಸುವ ಪ್ರಯತ್ನಕ್ಕೆ ಮನಸಾರೆ ಬೆಂಬಲಿಸಿದರು.

     ಮನುಷ್ಯನ ಜೀವನದಲ್ಲಿ ಸಂಬಂಧಗಳು - ತಾಯಿ, ತಂದೆ, ಮಕ್ಕಳು, ಅಜ್ಜ, ಅಜ್ಜಿ, ಅಣ್ಣ, ತಂಗಿ, ಅಕ್ಕ, ತಮ್ಮ, ಗಂಡ, ಹೆಂಡತಿ, ಇತ್ಯಾದಿ - ಹಾಸುಹೊಕ್ಕಾಗಿದೆ. ಈ ಸಂಬಂಧಗಳು ಮಧುರವಾಗಿದ್ದರೆ ಚೆನ್ನ. ಇಲ್ಲದಿದ್ದರೆ. . . .? ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದಂತೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಮುಂದೊಮ್ಮೆ ಚಿಕ್ಕಪ್ಪ, ದೊಡ್ಡಮ್ಮ, ಷಡ್ಡಕ, ಓರಗಿತ್ತಿ, ಅತ್ತಿಗೆ, ಮೈದುನ, ದಾಯಾದಿ, ಸೋದರತ್ತೆ, ಇತ್ಯಾದಿ ಸಂಬಂಧಗಳ ಅರ್ಥವೇ ಮಕ್ಕಳಿಗೆ ತಿಳಿಯದೇ ಹೋಗಬಹುದು. ಈಗ ಹೆಚ್ಚಿನ ಕುಟುಂಬಗಳಲ್ಲಿ ಒಂದೇ ಮಗುವಿರುವುದರಿಂದ ಅಣ್ಣ, ತಮ್ಮ, ಅಕ್ಕ, ತಂಗಿಯರ ಪ್ರೀತಿಯ ಅನುಬಂಧಗಳ ಅನುಭವಗಳೂ ಸಹ ಆ ಮಕ್ಕಳಿಗೆ ಆಗುತ್ತಿಲ್ಲ. ಗಂಡ, ಹೆಂಡತಿ ಇಬ್ಬರೂ ಒಟ್ಟಿಗೆ ಇದ್ದರೆ ಅದೇ ಅವಿಭಕ್ತ ಕುಟುಂಬ ಎಂದು ಹೇಳುವ ಪರಿಸ್ಥಿತಿ ಇಂದು ಇದೆ. ಸಂಬಂಧಗಳು ಚೆನ್ನಾಗಿರಬೇಕೆಂದರೆ ನಾವು ಎಲ್ಲರೊಂದಿಗೆ ಚೆನ್ನಾಗಿರಬೇಕೆಂಬ ಮೂಲ ತತ್ವ ನೆನಪಿಡಬೇಕು.
     ಬಾಂಧವ್ಯಗಳು ಸುಮಧುರವಾಗಿರಲು ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಬಹುದು. ೧.ಒಳ್ಳೆಯ ಕೆಲಸಗಳನ್ನು ಮಾಡಿದಾಗ  ಮೆಚ್ಚುಗೆ ವ್ಯಕ್ತಪಡಿಸುವುದು, ಪ್ರೋತ್ಸಾಹಿಸುವುದು. ೨.ತಪ್ಪಾದಾಗ ಸರಿಪಡಿಸಲು ಪ್ರಾಮಾಣಿಕ ಯತ್ನ ಮಾಡುವುದು. ೩.ಮಾಡಿದ ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯದಿರುವುದು. ೪.ಸಂಬಂಧಗಳು ಕೆಡುವಂತಹ ಯಾವುದೇ ಕೆಲಸಗಳನ್ನು ಮಾಡದಿರುವುದು. ೫.ಬಂಧುಗಳೊಳಗೆ ಸಾಧ್ಯವಾದಷ್ಟೂ ಹಣಕಾಸಿನ ವ್ಯವಹಾರಗಳನ್ನು ಇಟ್ಟುಕೊಳ್ಳದಿರುವುದು. ೬.ಸಭೆ, ಸಮಾರಂಭಗಳಿಗೆ ಆಹ್ವಾನ ಬಂದಾಗ ಹಾಜರಾಗುವುದು. ೭.ಹುಟ್ಟುಹಬ್ಬ, ವಿವಾಹದ ದಿನ, ಹಬ್ಬ ಹರಿದಿನಗಳು, ಇತ್ಯಾದಿ ದಿನಗಳಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು. ೮.ಕಷ್ಟ ಕಾಲದಲ್ಲಿ ನೆರವಾಗುವುದು, ಸಾಧ್ಯವಿಲ್ಲದಿದ್ದಲ್ಲಿ ಸಾಂತ್ವನ ಹೇಳುವುದು. ೯.ನೇರವಾಗಿ ಅಥವಾ ಹಿಂದಿನಿಂದ ದೂರದಿರುವುದು. ೧೦.ಭಿನ್ನಾಭಿಪ್ರಾಯ ಬಂದಾಗ ಮುಖಾಮುಖಿ ಮಾತನಾಡಿ ಭಿನ್ನತೆ ಪರಿಹರಿಸಿಕೊಳ್ಳುವುದು. ೧೧.ಹೇಳುವುದಕ್ಕಿಂತ ಕೇಳುವುದಕ್ಕೆ ಆದ್ಯತೆ ನೀಡುವುದು. . . . .ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಒಟ್ಟಿನಲ್ಲಿ ಸಮಯ, ಸಂದರ್ಭ, ಪರಿಸರಕ್ಕೆ ಅನುಗುಣವಾಗಿ ನಡೆಯುತ್ತಾ ನಮ್ಮ ಕಡೆಯಿಂದ ತಪ್ಪಾಗದಿರುವಂತೆ ನೋಡಿಕೊಂಡರೆ ಬಾಂಧವ್ಯಗಳು ಎಲ್ಲರಿಗೂ ಹಿತಕಾರಿಯಾಗಿರುತ್ತದೆ.
     ದ್ವೇಷಿಸಲು ನಮಗೆ ಹಲವಾರು ಕಾರಣಗಳು ಸಿಗುತ್ತವೆ. ಆದರೆ ಪ್ರೀತಿಸಲೂ ನಮಗೆ ಕಾರಣಗಳು ಇರುತ್ತವೆಂಬುದನ್ನು ಮರೆಯದಿರೋಣ. ಇದು ನಾವು ನೋಡುವ ದೃಷ್ಟಿಯನ್ನು ಅವಲಂಬಿಸಿದೆ. ದ್ವೇಷದ ಪರಿಣಾಮ ಇತರರನನ್ನೂ ಹಾಳು ಮಾಡಿ ನಮ್ಮನ್ನೂ ಹಾಳು ಮಾಡುತ್ತದೆ ಎಂಬುದನ್ನು ಮರೆಯಬಾರದು. ದ್ವೇಷದಿಂದ ಇತರರಿಗೆ ಆಗುವ ಹಾನಿಗಿಂತ ಸ್ವಂತಕ್ಕೆ ಮತ್ತು ತನ್ನ ಕುಟುಂಬದ ಸದಸ್ಯರಿಗೆ ಆಗುವ ಹಾನಿಯೇ ಹೆಚ್ಚು. ಕತ್ತಲೆಯನ್ನು ಕತ್ತಲೆಯಿಂದ ಓಡಿಸಲಾಗುವುದಿಲ್ಲ. ಅದಕ್ಕೆ ಬೆಳಕೇ ಬರಬೇಕು. ಹಾಗೆಯೇ ದ್ವೇಷವನ್ನು ದ್ವೇಷದಿಂದ ತೊಡೆಯಲಾಗುವುದಿಲ್ಲ. ಹಾಗೆ ಮಾಡಿದರೆ ದ್ವೇಷ ಇನ್ನೂ ಹೆಚ್ಚುವುದಲ್ಲದೆ ಅದರ ವ್ಯಾಪ್ತಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗೂ ಹಬ್ಬುತ್ತದೆ. ದೊಡ್ಡವರ ತಪ್ಪಿಗೆ ಮಕ್ಕಳು ಬಲಿಯಾಗಬಾರದಲ್ಲವೇ? ದ್ವೇಷವನ್ನು ಗೆಲ್ಲಲು ಪ್ರೀತಿಗೆ ಮಾತ್ರ ಸಾಧ್ಯ. ತಪ್ಪು ಮಾಡಿಯೂ, ತಪ್ಪೆಂದು ಗೊತ್ತಿದ್ದೂ ತಿದ್ದಿಕೊಂಡು ನಡೆಯಲು ಬಯಸದವರು, ಅವರದೇ ಆದ ಕಾರಣಗಳಿಗಾಗಿ ಸುಳ್ಳು ಆರೋಪಗಳನ್ನು ಮಾಡಿ ಸಂಬಂಧಗಳನ್ನು ಕೆಡಿಸುವವರು ಕೆಲವರು ಇರುತ್ತಾರೆ. ಅಂತಹವರಿಂದ ದೂರವಿರುವುದು ಒಳ್ಳೆಯದು. ಅವರನ್ನೂ ಸಾಧ್ಯವಾದರೆ ಪ್ರೀತಿಸೋಣ; ಆಗದಿದ್ದರೆ ಸುಮ್ಮನಿರೋಣ! ಆದರೆ ಯಾವ ಕಾರಣಕ್ಕೂ ದ್ವೇಷಿಸದಿರೋಣ!! ಇತರರು ಇಷ್ಟಪಡುವ ವ್ಯಕ್ತಿತ್ವ ಬೆಳೆಸಿಕೊಳ್ಳೋಣ!!! ಇತರರು ಇಷ್ಟಪಡುವ ವ್ಯಕ್ತಿತ್ವ ನಮ್ಮದಾಗಬೇಕೆಂದರೆ ಇತರರನ್ನು ಇಷ್ಟಪಡುವ ಮನೋಭಾವ ನಾವು ಬೆಳೆಸಿಕೊಂಡರೆ ಮಾತ್ರ ಸಾಧ್ಯ. ಇತರರ ಪ್ರೀತಿ, ವಿಶ್ವಾಸ, ಸ್ನೇಹ, ಸಹಕಾರ ನಮಗೆ ಬೇಕೆಂದರೆ ಮೊದಲು ಅದನ್ನು ಇತರರಿಗೆ ನಾವು ನೀಡಬೇಕು. ಹಣ ಖರ್ಚು ಮಾಡಿದಷ್ಟೂ ಕಡಿಮೆಯಾಗುತ್ತದೆ. ಆದರೆ ಪ್ರೀತಿ, ವಿಶ್ವಾಸಗಳು ನೀಡಿದಷ್ಟೂ ಹೆಚ್ಚಾಗುತ್ತಾ ಹೋಗುತ್ತದೆ. ಪ್ರೀತಿಗೆ ಮಾಂತ್ರಿಕ ಶಕ್ತಿಯಿದೆ. ಪ್ರೀತಿಯ ಭಾಷೆಯನ್ನು ಮೂಕ ಮಾತನಾಡಬಲ್ಲ; ಕಿವುಡ ಕೇಳಬಲ್ಲ; ಪ್ರೀತಿಯ ಹಾಡಿಗೆ ಹೆಳವ ಕುಣಿಯಬಲ್ಲ; ಪ್ರೀತಿಯ ಕಣ್ಣಿನಲ್ಲಿ ಕುರುಡ ನೋಡಬಲ್ಲ. ಜೀವನವನ್ನು ನೋಡುವ ರೀತಿ ಬದಲಾಯಿಸಿಕೊಂಡಲ್ಲಿ, ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ತಪ್ಪು ಹುಡುಕದೆ ಒಳ್ಳೆಯ ಅಂಶಗಳನ್ನು ಗುರುತಿಸುವ ಅಭ್ಯಾಸ ಬೆಳೆಸಿಕೊಂಡಲ್ಲಿ, ನಮ್ಮನ್ನು ಇತರರು ಇಷ್ಟಪಡದಿದ್ದರೂ ದ್ವೇಷಿಸುವುದಿಲ್ಲ.
     ವೈರಿಯ ಅಬ್ಬರಕೆ ಬರೆಯೆಳೆಯಬಹುದು|
     ಕಪಟಿಯಾಟವನು ಮೊಟಕಿಬಿಡಬಹುದು||
     ಮನೆಮುರುಕರನು ತರುಬಿಬಿಡಬಹುದು|
     ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ||
     ಕವಿ ಕುಟುಂಬಗಳ ವಾರ್ಷಿಕ ಸಮಾವೇಶಗಳ ಪ್ರಮುಖ ಉದ್ದೇಶ ಸಹ ಬಾಂಧವ್ಯಗಳನ್ನು ಉತ್ತಮಗೊಳಿಸುವುದೇ ಆಗಿದೆ. ನಮ್ಮ ಪೂರ್ವಜರ, ಹಿರಿಯರ ಒಳ್ಳೆಯ ಸಾಧನೆಗಳನ್ನು ನೆನೆಸಿಕೊಂಡು ನಾವೂ ಸಹ ಏನನ್ನಾದರೂ ಸಾಧಿಸಲು ಪ್ರೇರಿಸಬೇಕೆಂಬುದು ಇದರ ಹಿನ್ನೆಲೆಯಾಗಿದೆ. ಒಂದೇ ಕುಟುಂಬದ ಒಟ್ಟಿಗೆ ಸೇರದ ಸದಸ್ಯರುಗಳೂ ಸಹ ಸಮಾವೇಶದಲ್ಲಿ ಒಟ್ಟಿಗೆ ಸೇರುತ್ತಿರುವುದು ಒಳ್ಳೆಯ ಬೆಳವಣಿಗೆ.  ಒಳ್ಳೆಯ ಸಂಗತಿಗಳಿಗೆ ಪ್ರಾಧಾನ್ಯತೆ ನೀಡಿದಷ್ಟೂ ಕೆಟ್ಟ ಸಂಗತಿಗಳಿಗೆ ಹಿನ್ನಡೆಯಾಗುತ್ತದೆ. ವಾರ್ಷಿಕ ಸಮಾವೇಶಗಳಲ್ಲಿ ನಮ್ಮ ಪೂರ್ವಜರ ಕೃತಿಗಳನ್ನು ಆಧರಿಸಿದ ರೂಪಕ, ನಾಟಕ, ಸಂಗೀತ, ಇತ್ಯಾದಿಗಳನ್ನು ಏರ್ಪಡಿಸಬಹುದು. ಇದಕ್ಕೆ ಪೂರ್ವ ತಯಾರಿ ಮಾಡಬಹುದು. ಪ್ರತಿ ಕುಟುಂಬದ ಕಡೆಯಿಂದ ವರ್ಷದ ಸಾಧನೆಯಾಗಿ ಏನನ್ನಾದರೂ ಮಾಡಲು ಕುಟುಂಬದ ಒಬ್ಬರು ಸದಸ್ಯರಾದರೂ ಮನಸ್ಸು ಮಾಡಬೇಕು. ಆ ಸಾಧನೆ ಬರವಣಿಗೆಯಿರಬಹುದು,  ನಟನೆ, ಆಟೋಟ, ಸಂಗೀತ,ನಾಟ್ಯವಿರಬಹುದು, ಚಿತ್ರಕಲೆಯಾಗಿರಬಹುದು, ನಾವು ತೊಡಗಿಕೊಂಡಿರುವ ವೃತ್ತಿ ಅಥವಾ ಪ್ರವೃತ್ತಿಯಲ್ಲಿರಬಹುದು,  ಗಮನಿಸಬಹುದಾದ ಯಾವುದೇ ಸಂಗತಿಯಿರಬಹುದು. ಸಮಾವೇಶಗಳಲ್ಲಿ ಇಂತಹ ಸಾಧನೆಗಳನ್ನು ಮಾಡಿದವರನ್ನು ಗುರುತಿಸಿ ಬೆನ್ನು ತಟ್ಟಬಹುದು, ಗೌರವಿಸಬಹುದು. ಇತರರು ಮಾಡಲಿ, ನಾವು ಪ್ರೋತ್ಸಾಹಿಸೋಣ ಎಂಬುದರ ಬದಲಿಗೆ ನಾವೂ ಏನನ್ನಾದರೂ ಜೀವಿತಕಾಲದಲ್ಲಿ ಸಾಧಿಸೋಣ ಎಂಬ ಭಾವನೆ ಬಂದಲ್ಲಿ ಉತ್ತಮ ಬೆಳವಣಿಗೆಯೇ ಸರಿ. ಕವಿ ಕುಟುಂಬಗಳವರು ಮನಸ್ಸು ಮಾಡಿ ಕಾರ್ಯ ಪ್ರವೃತ್ತರಾಗುತ್ತಾರೆ, ವಾರ್ಷಿಕ ಸಮಾವೇಶಗಳು ಇಂತಹ ಆರೋಗ್ಯಕರ ಸ್ಪರ್ಧೆಗೆ ಉತ್ತಮ ವೇದಿಕೆಯಾಗುತ್ತದೆ ಎಂಬುದು ನನ್ನ ನಿರೀಕ್ಷೆ.
-ಕ.ವೆಂ. ನಾಗರಾಜ್.
********************

1 ಕಾಮೆಂಟ್‌:

  1. ಆತ್ಮೀಯ ನನ್ನ ಬಂಧುಗಳೇ,
    ಶ್ರೀ ಕವಿನಾಗರಾಜ್ ನನ್ನ ಅಣ್ಣನ ಸಮಾನರು.ವೇದಸುಧೆ ಬ್ಲಾಗಿನ ಗೌರವ ಸಂಪಾದಕರು. ಈ ಲೇಖನವು ಒಂದು ನೆಮ್ಮದಿಯ ಬದುಕಿಗೆ ದಾರಿ ದೀಪವಾಗಿದೆ.ಇದರ ಪ್ರೇರಣೆಯಿಂದ ನಮ್ಮ ನಮ್ಮ ಸಂಬಂಧವನ್ನು ಇನ್ನೂ ಗಟ್ಟಿ ಮಾಡಿಕೊಳ್ಳೋಣ. ಶ್ರೀ ನಾಗರಾಜರಿಗೆ ಹೃಪತ್ಪೂರ್ವಕ ನಮಸ್ಕಾರಗಳು ಸಲ್ಲುತ್ತದೆ.

    ಪ್ರತ್ಯುತ್ತರಅಳಿಸಿ