ಗುರುವಾರ, ಜುಲೈ 14, 2011

ಹರಿಹರಪುರದ ನಮ್ಮ ಮನೆ

ಹರಿಹರಪುರದ ನಮ್ಮ ಮನೆ, ಅಂದರೆ ನಮ್ಮ ಅತ್ತೆ, (ಮಾವ ದಿವಂಗತರಾಗಿ ೪ ವರ್ಷವಾಯಿತು) ಮಕ್ಕಳು, ಸೊಸೆಯರು, ಅಳಿಯಂದಿರು, (ಶ್ರೀಧರ್ ರವರು ಹಿರಿಯ ಅಳಿಯ)ನಾವೆಲ್ಲರೂ ಸೇರಿದಾಗ. . . . . . ಹರಿಹರಪುರದ ನಮ್ಮ ಮನೆಯಲ್ಲಿ ನಮ್ಮ ಅತ್ತೆ ಜೊತೆಗೆ ೪ ಜನ ಗಂಡು ಮಕ್ಕಳು, ನಾವು ೪ ಜನ ಸೊಸೆಯರು ಹಾಗೂ ಇಬ್ಬರು ಹೆಣ್ಣು ಮಕ್ಕಳು ಮಂಗಳ ಮತ್ತು ಅವಳ ತಂಗಿ ಅಂದರೆ ನನ್ನ ಇನ್ನೊಬ್ಬ ನಾದಿನಿ ಲಲಿತ ಮತ್ತು ಇಬ್ಬರು ಅಳಿಯಂದಿರು ಎಲ್ಲರೂ ಒಟ್ಟಿಗೆ ಸೇರಿದರೆ ಅದೇ ಒಂದು ದೊಡ್ಡ ಹಬ್ಬ ನಮಗೆ. ವರ್ಷದಲ್ಲಿ ಆರೇಳು ಬಾರಿ ಹೀಗೆ ಮನೆಯವರೆಲ್ಲಾ ಪ್ಲಾನ್ ಮಾಡಿ ಶಿವಮೊಗ್ಗದಲ್ಲಿ ಅಥವಾ ಹಾಸನದಲ್ಲಿ ಅಥವಾ ಬೆಂಗಳೂರಿನಲ್ಲೋ ಒಟ್ಟು ಸೇರುತ್ತೇವೆ. ನಾವೆಲ್ಲರೂ ಹರಿಹರಪುರಕ್ಕೆ ಹೋದರೆ ನಮ್ಮ ಅತ್ತೆಗಂತೂ ಖುಷಿ. ನಿಮಗೆ ಏನೂ ಬೇಕೋ ಮಾಡಿಕೊಳ್ಳಿರಮ್ಮ ಅನ್ನುತ್ತಾರೆ. ಮಕ್ಕಳಿಗೆ ಅವರು ಕೇಳಿದ್ದನ್ನು ಮಾಡಿಹಾಕುವುದರಲ್ಲೇ ಖುಷಿ ಪಡುವವರು.. ಎಲ್ಲರೂ ಸೇರಿ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಚಾರ ವಿನಿಮಯ ಮಾಡಿಕೊಳ್ಳುತ್ತೇವೆ. ರಾತ್ರಿ ಊಟ ಆದಮೇಲೆ ಮಲಗುವ ಸಮಯದಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಹಿಂದಿನದಲ್ಲೆವನ್ನೂ ನೆನಪಿಸಿಕೊಂಡು ಹೊಟ್ಟೆ ಹುಣ್ಣಾಗುವಂತೆ ನಗುತ್ತೇವೆ. ಅದರಲ್ಲೂ ನನ್ನ ಚಿಕ್ಕ ಮೈದುನ ರಾಮ್‌ಪ್ರಸಾದ್ ಇದ್ದರಂತೂ ಏನಾದರೂ ಒಂದು ವಿಷಯ ತೆಗೆದು ಎಲ್ಲರನ್ನೂ ನಗಿಸುವ ಪ್ರವೃತ್ತಿ ಅವನದ್ದು. ನಮ್ಮ ಮನೆಯಲ್ಲಿ ಸೊಸೆಯರು ಹೆಣ್ಣುಮಕ್ಕಳು ಎಂಬ ಭೇದಭಾವವಿಲ್ಲ. ಎಲ್ಲರೂ ಒಟ್ಟಾಗಿ ಕಷ್ಟಸುಖ ಹಂಚಿಕೊಳ್ಳುತ್ತೇವೆ. ಇದರಲ್ಲಿ ಗಂಡುಮಕ್ಕಳು ಹಾಗೂ ಅಳಿಯಂದಿರು ಭಾಗಿಗಳು. ನಾವುಗಳು ಎಲ್ಲರೂ ಊರಿಗೆ ಹೋದಾಗ ದಿನ, ವಾರ, ನಕ್ಷತ್ರ ಏನೂ ತಿಳಿಯುವುದಿಲ್ಲ. ದಿನಗಳು ಉರುಳುವುದು ಗೊತ್ತಾಗುವುದೇ ಇಲ್ಲ. ರಜಗಳು ಮುಗಿದು ಮರಳಿ ನಮ್ಮ ನಮ್ಮ ಊರಿಗೆ ವಾಪಾಸ್ಸು ಬರುವಾಗ ಎಲ್ಲರಿಗೂ ಒಂದು ತರಹದ ಹಿಂಜರಿಕೆ. ಬೇಸರ. ಆದರೂ ಬರಲೇಬೇಕಲ್ಲ.
ನಮ್ಮ ಮಾವನವರ ಬಗ್ಗೆ ಎಷ್ಟು ಹೇಳಿದರೂ ಸಾಲದು ಅವರು ೯೦ ವರ್ಷ ತುಂಬು ಜೀವನ ನಡೆಸಿ ದಿವಂಗತರಾದರು. ಅವರ ವ್ಯಕ್ತಿತ್ವ ವರ್ಣಿಸಲಸಾಧ್ಯ. ಅವರಿಗೆ ನಮ್ಮ ಮನೆಯವರು ಮೊದಲ ಮಗ. ಇವರೂ ಸೇರಿ ಒಟ್ಟು ೪ ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಅವರೂ ಸಣ್ಣವರಿದ್ದಾಗಿನಿಂದಲೂ ಬಹಳ ಕಷ್ಟ ಜೀವಿ. ವೃತ್ತಿಯಲ್ಲಿ ಮೇಸ್ಟರಾಗಿದ್ದರು. ಬಹಳ ಪ್ರಾಮಾಣಿಕ ವ್ಯಕ್ತಿ. ಒಬ್ಬರ ಮನಸ್ಸಿಗೆ ನೋವಾಗುವ ಮಾತನ್ನು ಆಡುತ್ತಿರಲಿಲ್ಲ. ನನ್ನ ಮದುವೆಯಾಗಿ ೨೫ ವರ್ಷಗಳಿಂದಲೂ ಅವರನ್ನು ನೊಡಿದ್ದೇನೆ. ಸೊಸೆಯರನ್ನೂ ಸಹ ಮಕ್ಕಳಂತೆ ನೋಡುತ್ತಿದ್ದರು. ಅವರ ಮುಂದೆ ಯಾರೂ ಬೇಜಾರು ಮಾಡಿಕೊಳ್ಳಬಾರದು. ಅವರು ಶಿವಮೊಗ್ಗೆಗೆ ಬಂದಾಗ, ಮಗ ಕಛೇರಿಯಿಂದ ಸಂಜೆ ವಾಪಾಸ್ಸು ಬರುವುದು ಸ್ವಲ್ಪ ತಡವಾದರೂ ಸಾಕು ಗೇಟಿನಲ್ಲಿಯೇ ನಿಂತು ಅವರು ಬರುವವರೆಗೂ ಕಾಯುತ್ತಿದ್ದರು. ನಮ್ಮ ಅತ್ತೆ, ಏಕೆ ಗೇಟಿನಲ್ಲಿ ನಿಂತು ಕಾಯುತ್ತಿದ್ದೀರಿ, ಒಳಗೆ ಬನ್ನಿ, ಎಲ್ಲೋ ಕಛೇರಿಯಲ್ಲಿ ಲೇಟಾಗಿರಬೇಕು, ಬರುತ್ತಾನೆ ಬಿಡಿ ಅಂದರೂ ಕೇಳದೆ ಹೊರಗೆ ನಿಂತಿರುತ್ತಿದ್ದರು. ಇವರು ಮನೆಗೆ ಬಂದು ಯಾಕಣ್ಣಾ ಹೊರಗೆ ನಿಂತಿದ್ದೀರಿ, ಎಂದು ಕೇಳಿದರೆ ಸುಮ್ಮನೆ ನಿಂತಿದ್ದೆ ಕಣಪ್ಪಾ ಎಂದು ಹೇಳುತ್ತಿದ್ದುದು ನನಗೆ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಏನೋ ಒಟ್ಟಿನಲ್ಲಿ ಅವರಿಗೆ ಮಕ್ಕಳ ಮೇಲೆ ಬಹಳ ಕಾಳಜಿ ಇತ್ತು. ತಮ್ಮ ಕೊನೆಯ ಜೀವಿತಾವಧಿಯವರೆಗೂ ತಮ್ಮ ಸ್ವಂತಕ್ಕೆ ಇಂಥಹದು ಬೇಕು, ತಂದು ಕೊಡು ಎಂದು ಯಾವ ಮಕ್ಕಳಲ್ಲೂ ಕೇಳಿದವರಲ್ಲ. ಆದರೆ ಒಂದು ಅಭ್ಯಾಸ ಮಾತ್ರ ಇತ್ತು. ಅದು ನಶ್ಯ. ಅದೆಂತಹದೋ ಕೊಡೆ ಮಾರ್ಕ್ ನಶ್ಯ. ಮಗ ಆಫೀಸ್‌ಗೆ ಹೊರಟಾಗ ಯಾರಿಗೂ ಗೊತ್ತಾಗದ ಹಾಗೆ ಹೊರಗಡೆ ಹೋಗಿ ರಾಜೀ, ನಿನಗೆ ಇವತ್ತು ಪುರುಸೊತ್ತಿದೆಯಾ ಎಂದು ಕೇಳುತ್ತಿದ್ದರು. ಯಾಕಣ್ಣಾ ಅಂದರೆ ನಶ್ಯ ಸಾಧ್ಯವಾದರೆ ತರುತ್ತೀಯಾ ಎಂದು ಹೇಳುತ್ತಿದ್ದರು. ಅಂತೂ ಎಲ್ಲೋ ಹುಡುಕಿ ಅವರ ಹೇಳಿದ ಕೊಡೆ ಮಾರ್ಕ್ ನಶ್ಯವನ್ನೇ ತಂದು ಕೊಟ್ಟು ಚೆನ್ನಾಗಿದೆಯೇನಣ್ಣಾ ಎಂದು ಇವರು ಕೇಳಿದರೆ, ಹೂ ಕಣಪ್ಪ ಅನ್ನುತ್ತಿದ್ದರು. ಒಳಗೆ ನಮ್ಮ ಅತ್ತೆಯ ಹತ್ತಿರ ಹೋಗಿ, ಯಾಕೋ ಈ ನಶ್ಯ ಒಂದು ಥರಾ ಅಡ್ಡ ವಾಸನೆ ನೋಡು, ಪಾಪ ಆ ಹುಡುಗ ಕಷ್ಟ ಪಟ್ಟುತಂದಿದ್ದಾನೆ. ಏನು ಮಾಡ್ತೀಯಾ ಹೇಳು ಎಂದು ಪಕ್ಕಕ್ಕಿಡುತ್ತಿದ್ದರು. ಅದಕ್ಕೆ ನಮ್ಮ ಅತ್ತೆ, ನಿಮಗೆ ಯಾವ ನಶ್ಯವೂ ಸರಿಯಾಗಿರುವುದಿಲ್ಲ. ಸುಮ್ಮನೆ ಹಾಕಿಕೊಳ್ಳಿ, ಆ ಹುಡುಗರನ್ನು ಅಡ್ಡಾಡಿಸಬೇಡಿ ಎಂದು ಹೇಳುತ್ತಿದ್ದರು. ಇವೆಲ್ಲಾ ಸತ್ಯವಾಗಿ ನಡೆದ ಘಟನೆ. ಹೀಗೆ ಬರೆಯುತ್ತಾ ಹೋದರೆ ಬಹಳ ಉದ್ದವಾಗಿ ಬಿಡುತ್ತೆ. ಸದ್ಯಕ್ಕೆ ಸಾಕು. ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ನಮ್ಮ ಬ್ಲಾಗಿನಲ್ಲಿ ಇನ್ನೂ ವಿವರವಾಗಿ ಚಿತ್ರಣವನ್ನು ಎಳೆಎಳೆಯಾಗಿ ಬಿಡಿಸಿ ನಮ್ಮ ಮನೆಯ ಬಗ್ಗೆ ನಮ್ಮ ಯಜಮಾನರಿಂದ ಕೇಳಿ ತಿಳಿದುಕೊಂಡು ಹಾಗೂ ನನಗೆ ಗೊತ್ತಿರುವ ವಿಷಯ ಸೇರಿಸಿ ಬರೆಯೋಣವೆಂದುಕೊಂಡಿದ್ದೇನೆ.
ವಿಜಯ ಶ್ರೀಕಂಠಮೂರ್ತಿ

1 ಕಾಮೆಂಟ್‌:

  1. ನಿಜವಾಗಿಯೂ ನಮ್ಮ ಮಾವನವರ ಕುಟುಂಬದ ಬಗ್ಗೆ ಸಂತೋಷವಿದೆ.ನನ್ನ ಪತ್ನಿಯ ಅಣ್ಣತಮ್ಮಂದಿರು ಹಾಗೂ ಅವರುಗಳೊಡನೆ ನಾವೆಲ್ಲಾ ಒಟ್ಟಿಗೆ ಸೇರಿದಾಗ ಅದು ಒಂದು ಸ್ವರ್ಗ. ಅಷ್ಟೇ ಅಲ್ಲ ನಮ್ಮ ಊರಿನ ಮಕ್ಕಳು ಬೆಂಗಳೂರಿನಲ್ಲಿ ಹಲವರಿದ್ದಾರೆ. ದತ್ತ, ಪ್ರಸಾದಿ,ವೆಂಕಟೇಶ,ಕುಮಾರ ಇವರುಗಳೂ ಕೂಡ ಸೇರಿದರಂತೂ ಸ್ವರ್ಗ ಬೇರೆಡೆ ಇರಲು ಸಾಧ್ಯವೇ ಇಲ್ಲ. ಶ್ಯಾಮಣ್ಣ,ರಾಮಪ್ರಸಾದ್ ಅಥವಾ ಇವರಲ್ಲಿ ಎಲ್ಲರೂ ತಮ್ಮ ತಮ್ಮ ಅನುಭವ ಹಂಚಿಕೊಳ್ಳಬಹುದು. ಯಾಕೋ ಆಸಕ್ತಿಯ ಕೊರತೆ ಕಾಣುತ್ತಿದೆ. ನಿಮ್ಮ ಲೇಖನಗಳು ಅವರಿಗೆಲ್ಲಾ ಪ್ರೇರಣೆ ಕೊಡಲಿ. ಈ ಬ್ಲಾಗಿನ ಉದ್ಧೇಶ ಸಾರ್ಥಕವಾಗಲಿ.

    ಪ್ರತ್ಯುತ್ತರಅಳಿಸಿ